ದೇಹಾತೀತ ಆತ್ಮಧ್ವನಿಯನ್ನು ಅಭಿವ್ಯಕ್ತಿಸಿದ ಸಾಲು-ಸಾಲುಗಳಿಂದ ತುಂಬಿರುವ 'ಇರುವಷ್ಟು ಕಾಲ' ಕವಿತಾ ಸಂಕಲನ, ತನ್ನೊಡಲಲ್ಲಿ ಇನ್ನೂ ಇಂತಹ ಹಲವಾರು ಸಾಲುಗಳನ್ನು ಇರಿಸಿಕೊಂಡಿದೆ.'ಇರುವಷ್ಟು ಕಾಲ' ಎನ್ನುವ ಶಿರ್ಷಿಕೆಯೇ ಅನಂತತೆಯ ಪಯಣವನ್ನು ಬಿಂಬಿಸುವ ಶಬ್ಧವಾಗಿದ್ದು, 'ಇರುವಷ್ಟೇ ಕಾಲ ಇರುವಷ್ಟೇ ಕಾಲ' ಎನ್ನುವ ಉಪಶೀರ್ಷಿಕೆ ತಟ್ಟನೆ ಅನಿಶ್ಚಿತ ಬದುಕಿನ ಪರಿಮಿತ ಅವಧಿಯನ್ನು ನೆನಪಿಸುತ್ತದೆ. ಈ ಎರಡು ದಾಹಗಳ ಮಧ್ಯೆ ಮನುಷ್ಯನು ಹೀಗೇ ಪರದಾಡುತ್ತಾನೆ. ಅನಿಶ್ಚಿತತೆ, ಶಾಶ್ವತತೆಯಿಂದ ಹೆದರಿಹೋದ ಆತ ಅನಂತ ದಾರಿಯ ಅರಸುತ್ತಲೇ ಇರುತ್ತಾನೆ. ಒಂದು ಕ್ಷಣದ ಬದುಕೆನ್ನುವ ಸತ್ಯ ಒಂದೆಡೆಯಾದರೆ ಆತ್ಮಕ್ಕೆ ಸಾವೇ ಇಲ್ಲ ಎನ್ನುವ ಸತ್ಯ ಇನ್ನೊಂದೆಡೆ. ಈ ಚಿಂತೆಗಳ ಒಳದೋಟಿಯಲ್ಲಿ ಒಡಮೂಡಿದ ಕವಿತೆಗಳು ಈ ಕೃತಿಯನ್ನಾವರಿಸಿವೆ.